ಯಶಸ್ವಿಯಾಗಿ 7 ದಿನ ನಡೆದ ಶ್ರೀ ವಿಠ್ಠಲ ರುಕ್ಮಾಯಿ ದಿಂಡಿ ಮಹೋತ್ಸವ ಹಾಗು ನಾಮಸಪ್ತಾಹ

ಹರಿಹರ : ನಗರದ ವಿರಕ್ತ ಮಠದ ಬಳಿಯ ಎಸ್.ಎಸ್.ಕೆ ಸಮಾಜ ದ ಶ್ರೀ ವಿಠ್ಠಲ ರುಕ್ಮಾಯಿ ದೇವಸ್ಥಾನದಲ್ಲಿ ಕಳೆದ 7 ದಿನಗಳ ಕಾಲ ಶ್ರೀ ವಿಠಲ ರುಕ್ಮಯಿ ದಿಂಡಿ ಮಹೋತ್ಸವ ಶ್ರದ್ಧಾ ಭಕ್ತಿ ಹಾಗೂ ಭಜನೆಗಳಿಂದ ಯಶಸ್ವಿಯಾಗಿ ನಡೆಯಿತು.
   ಕೊನೆಯ ದಿನವಾದ ಸೋಮವಾರ ಬೆಳಗ್ಗೆ 5.30 ಕ್ಕೆ ಶ್ರೀಸ್ವಾಮಿಗೆ ಕಾಕಡಾರತಿ,ಭಜನೆ ಮತ್ತು ಜ್ಞಾನೇಶ್ವರಿ ಪಾರಾಯಣ ಉದ್ಯಾಪನ ಕಾರ್ಯಕ್ರಮ, ಸಂತರಿಗೆ ಫಲಹಾರ ನೆರವೇರಿತು. ಬೆಳಗ್ಗೆ 8.30 ರಿಂದ ಶ್ರೀ ವಿಠ್ಠಲ ರುಕ್ಮಾಯಿ ದಿಂಡಿ ಉತ್ಸವ ಮೆರವಣಿಗೆಯು ನಗರದ ರಾಜಬೀದಿಗಳಲ್ಲಿ ಹೊರಟು ದೇವಸ್ಥಾನ ತಲುಪಿದ ನಂತರ ಶ್ರೀ ಸಂತ ಪೂಜಾ ಹಾಗು ಮಹಾ ಮಂಗಳಾರತಿಯ ನಂತರದಲ್ಲಿ ಮಧ್ಯಾಹ್ನ 1:30ಕ್ಕೆ ಸಮಾಜದ ಬಂಧು-ಭಗಿನಿಯರಿಗೆ, ಆಗಮಿಸಿದ ಭಕ್ತಾದಿಗಳಿಗೆ ದೇವಸ್ಥಾನದ ಬಳಿ ಮಹಾಪ್ರಸಾದವನ್ನು 1000 ಕ್ಕೂ ಹೆಚ್ಚು ಸದ್ಭಕ್ತ ಜನರು ಸ್ವೀಕರಿಸಿದರು.
    ಮೊದಲನೇ ದಿನ ಜ.1 ರ ಸೋಮವಾರ ಸಂಜೆ 5.00 ರಿಂದ ಹ.ಭ.ಪ. ಶ್ರೀಮತಿ ನಂದಾ ಮತ್ತು ಹ.ಭ.ಪ. ಮೈಲಾರಲಿಂಗಸಾ ಕಾಟ್ವೆ ಇವರ ಸ್ವಗೃಹದಿಂದ ಭಜನೆ ಮೂಲಕ ಶ್ರೀ ವಿಠ್ಠಲ ರುಕ್ಮಾಯಿ ದೇವಸ್ಥಾನಕ್ಕೆ ಆಗಮಿಸಿ ಪೋತಿ ಸ್ಥಾಪನೆ ಮಾಡಲಾಯಿತು.ನಂತರ
ಮಂಗಳವಾರದಿಂದ ಸೋಮವಾರದವರೆಗೆ ಪ್ರತಿದಿನ ಬೆಳಗ್ಗೆ 5.30ಕ್ಕೆ ಕಾಕಡಾರತಿ ಭಜನೆ ಹಾಗೂ 7.00 ಗಂಟೆಯಿಂದ ಹ.ಭ.ಪ. ಮನೋಹರ ಬೊಂಗಳೆ ಇವರ ನೇತೃತ್ವದಲ್ಲಿ ಶ್ರೀ ಗ್ರಂಥರಾಜ ಜ್ಞಾನೇಶ್ವರಿ ಸಾಮೂಹಿಕ ಪಾರಾಯಣ ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಿತು.
    7 ದಿನ ನಡೆದ ವಿಶೇಷ ದಿಂಡಿ ಸಪ್ತಾಹವು ಹ.ಭ.ಪ. ಜಗನ್ನಾಥ ರಾವ್ ಬೊಂಗಾಳೆ ನೇತೃತ್ವದಲ್ಲಿ ದಿನಂಪ್ರತಿ ಸಂಜೆ 4.00 ಶ್ರೀ ಜೀಹ್ವೇಶ್ವರ ಮಾತೃ ಮಂಡಳಿ, ಮಾತೃ ಮಂಡಳಿ, ಎಸ್ ಎಸ್ ಕೆ ಮಹಿಳಾ ಮಂಡಳಿ, ಶ್ರೀ ರುಕ್ಮಿಣಿ ಮಾತೃ ಮಂಡಳಿ, ಶ್ರೀ ದತ್ತಪಾದುಕಾ ಮಂಡಳಿ  ಶ್ರೀ ಭಗವತಿ ಮಾತೃ ಮಂಡಳಿ ಹಾಗೂ ಶ್ರೀ ಜನಾಭಾಯಿ ಮಾತೃ ಭಜನಾ ಮಂಡಳಿ ಗಳಿಂದ ಶ್ರೀ ವಿಷ್ಣು ಸಹಸ್ರನಾಮಾವಳಿ ಪಠಣ ಹಾಗೂ ಭಜನೆ ಕಾರ್ಯಕ್ರಮಗಳು ನಡೆದವು.
     ಜ.6 ರ ಶನಿವಾರ ಸಂಜೆ 6.00 ರಿಂದ ಹೊಸಪೇಟೆಯ ಶ್ರೀ ವಿಠ್ಠಲ ಪ್ರಶಸ್ತಿ ವಿಜೇತ ಮತ್ತು ಶಿಕ್ಷಕ ಹ.ಭ.ಪ. ಮಾರುತಿ ರಾವ್ ಜ್ಞಾನಮೋಟೆ ಹಾಗು ಜ. 7 ರ ಭಾನುವಾರ ಸಂಜೆ 5.30 ರಿಂದ ದಾವಣಗೆರೆಯ ಹ.ಭ.ಪ. ಪುಂಡಲೀಕ ರಾವ್ ಗದ್ದಾಳೆ ಇವರಿಂದ ಪ್ರವಚನ ಹಾಗೂ ಸಂತ ವಾಣಿ ಕಾರ್ಯಕ್ರಮವನ್ನು, ನಂತರ 7.00 ರಿಂದ ದಾವಣಗೆರೆಯ ಹ.ಭ.ಪ. ಚಂದ್ರಕಾಂತ್ ವಾದೋನಿ ಇವರಿಂದ ಕೀರ್ತನೆಯನ್ನು ಸಹ ವಿಶೇಷವಾಗಿ ಆಯೋಜಿಸಲಾಗಿತ್ತು
ಎಂಬ ಸಂಪೂರ್ಣ ಮಾಹಿತಿಯನ್ನು ಅಧ್ಯಕ್ಷ ನಾಗರಾಜ್ ಎನ್. ಮೆಹರ್ವಾಡೆ ತಿಳಿಸಿದರು.
     ಏಳು ದಿನಗಳ ಕಾಲ ಅತ್ಯಂತ ಯಶಸ್ವಿಯಿಂದ ನಡೆದ ದಿಂಡಿ ಮಹೋತ್ಸವ ಕಾರ್ಯಕ್ರಮದಲ್ಲಿ ಸಮಾಜದ ಬಾಂಧವರು, ಯುವಕರು, ಮಹಿಳೆಯರು,ಬಾಲಕ-ಬಾಲಕಿಯರು ಸೇರಿದಂತೆ ಸರ್ವ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವ ವನ್ನು ಯಶಸ್ವಿಗೊಳಿಸಿ ದೇವರ ಕೃಪಾಶೀರ್ವಾದಗಳಿಗೆ ಪಾತ್ರರಾದೆವು ಎಂದು ಎಲ್ಲರೂ ಆಡಿಕೊಳ್ಳುತ್ತಿದ್ದು ಕಂಡುಬಂದಿತು.

Leave a Reply

Your email address will not be published. Required fields are marked *