ಬಳ್ಳಾರಿ,ಜು.04- ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಬಳ್ಳಾರಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಡೆಂಗ್ಯೂ ಜ್ವರ ನಿಯಂತ್ರಣ ಸಮೀಕ್ಷೆಯನ್ನು ನಗರದ ವಿವಿಧ ಪ್ರದೇಶಗಳಲ್ಲಿ ಹಮ್ಮಿಕೊಳ್ಳಲಾಯಿತು. ಸಮೀಕ್ಷೆಯನ್ನು ಸ್ವಯಂ ಸೇವಕರ ಜೊತೆ ಆಶಾ ಕಾರ್ಯಕರ್ತೆಯರು ಪ್ರತಿ ಮನೆ ಮನೆಗೆ ಹೋಗಿ ಅವರು ಸಂಗ್ರಹಿಸಿದ್ದ ನೀರಲ್ಲಿ ಲಾರ್ವ ಇರುವ ನೀರನ್ನು ಚೆಲ್ಲಿಸಿ ಪ್ರತಿ ಮನೆಯಲ್ಲಿ ಡೆಂಗ್ಯೂ ಜ್ವರ ಹೇಗೆ ತಡೆಗಟ್ಟಬೇಕೆಂದು ವಿವರವಾಗಿ ತಿಳಿಸಿದರು. ವಿವಿಧ ತೆಗ್ಗು ಪ್ರದೇಶಗಳಾದ ನಾಲಾಗಡ್ಡ, ಕೇಸರಿ ಬೀದಿ, ಗ್ವಾಲರಹಟ್ಟಿ, ಲಾಲಾಕಮಾನ್ ಪ್ರದೇಶದ ಮನೆಗಳಲ್ಲಿ ಸಂಗ್ರಹಿಸಿದ್ದ ನೀರಿನಲ್ಲಿ ಲಾರ್ವ ಕಂಡುಬಂದ ಕಾರಣ ಔಷಧಿಯನ್ನು ಹಾಕಿ ಡೆಂಗ್ಯೂ ಸೊಳ್ಳೆಗಳು ಹೇಗೆ ನಾಶ ಹೊಂದುತ್ತವೆ ಎಂದು ಮನೆಯ ಜನರಿಗೆ ತಿಳಿಸಿದರು. ಮನೆಗಳಲ್ಲಿ ಹೆಚ್ಚುದಿನಗಳವರೆಗೆ ನೀರನ್ನು ಸಂಗ್ರಹಿಸಬಾರದು ಎಂದು ಜನರಿಗೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಆರೋಗ್ಯ ಅಧಿಕಾರಿಗಳಾದ ಡಾ.ಅಬ್ದುಲ್ಲಾ, ಡಾ.ಕರುಣ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎಂ.ಎ.ಷಕೀಬ್, ಸೀನಿಯರ್ ಲ್ಯಾಬ್ ಟೆಕ್ನೀಶಿಯನ್ ನಂದಾರೆಡ್ಡಿ, ಶಶಿಧರ್ ಮೂರ್ತಿ, ಜಿಲ್ಲಾ ಕನ್ಸಲ್ಟಟೆಂಟ್ ಶಿಕ್ಷಾಣಾಧಿಕಾರಿ ಪ್ರತಾಪ್, ಸಂಯೋಜಕರಾದ ನಿಸಾರ್ ಅಹಮ್ಮದ್, ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರು ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರು ಸೇರಿದಂತೆ ಇತರರು ಇದ್ದರು.
ಬಳ್ಳಾರಿ ನಗರದ ವಿವಿಧ ಪ್ರದೇಶಗಳಲ್ಲಿ ಡೆಂಗ್ಯೂ ಜ್ವರ ಸಮೀಕ್ಷೆ
