ಸಾರ್ವಜನಿಕ ಆಸ್ಪತ್ರೆಯ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರೂ ಪ್ರಯತ್ನಿಸುತ್ತೇವೆ ; ಆರ್.ವಿಜಯ್ ಕುಮಾರ್

ಹರಿಹರ : ಸಾರ್ವಜನಿಕ ಆಸ್ಪತ್ರೆಯ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲಾ ಸದಸ್ಯರು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ ಎಂದು ನೂತನವಾಗಿ ಆಯ್ಕೆಯಾಗಿರುವ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಆರ್ ವಿಜಯ್ ಕುಮಾರ್ ತಿಳಿಸಿದರು.
     ನಗರದ ದಾಮೋದರ ಮಂಜುನಾಥ ಪೈ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ನೂತನವಾಗಿ ಆಯ್ಕೆಯಾಗಿರುವ ಆರೋಗ್ಯ ರಕ್ಷಾ ಸಮಿತಿ ಸದಸ್ಯರ ಸ್ವಾಗತ ಸಂದರ್ಭದಲ್ಲಿ ಮಾತನಾಡಿದ ಅವರು,ಆಸ್ಪತ್ರೆಯ ಅಭಿವೃದ್ಧಿಗೆ ನಾನು ಸೇರಿದಂತೆ ಉಳಿದೆಲ್ಲ ಸದಸ್ಯರು ಪ್ರಯತ್ನಿಸುತ್ತೇವೆ. ಸಾಮಾನ್ಯವಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಬಡ ರೋಗಿಗಳೇ ಚಿಕಿತ್ಸೆಗಾಗಿ ಬರುತ್ತಾರೆ.ಅವರ ಒಳಿತಿಗಾಗಿ ನಾವೆಲ್ಲರೂ ಅವಿರತ ಪ್ರಯತ್ನ ಮಾಡುವ ಭರವಸೆಯನ್ನು ನೀಡಿದರು.
     ಕಳೆದ ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ನಮ್ಮನ್ನು ನಾವು ಅರ್ಪಿಸಿಕೊಂಡು ಪಕ್ಷಕ್ಕಾಗಿ ದುಡಿದ ಹಿನ್ನೆಲೆಯಲ್ಲಿ ಪಕ್ಷ ನಮ್ಮನ್ನು ಗುರುತಿಸಿ ಗುರುತರವಾದ ಜವಾಬ್ದಾರಿಯನ್ನು ನಮಗೆ ನೀಡಿದೆ. ನಮ್ಮನ್ನು ಗುರುತಿಸಿ, ಸಾರ್ವಜನಿಕರ ಸೇವೆ ಮಾಡಲು ನಮ್ಮ ಮುಖಂಡರಾದ ನಂದಿಗಾವಿ ಶ್ರೀನಿವಾಸ್ ಹಾಗೂ ನಮ್ಮ ಆಯ್ಕೆಗೆ ಸಹಕರಿಸಿದ ಎಲ್ಲಾ ಕಾಂಗ್ರೆಸ್ ಮುಖಂಡರಿಗೆ ಧನ್ಯವಾದಗಳು ಅರ್ಪಿಸುತ್ತೇವೆ ಎಂದು ಹೇಳಿದರು.
    ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಎಲ್.ಹನುಮ ನಾಯಕ್ ಮಾತನಾಡಿ ನಮ್ಮ ಆಸ್ಪತ್ರೆಯು ಹಲವಾರು ವರ್ಷಗಳಿಂದ ಸಾರ್ವಜನಿಕರಲ್ಲಿ ಒಳ್ಳೆಯ ಚಿಕಿತ್ಸೆ ನೀಡುವ ಅಭಿಪ್ರಾಯವನ್ನು ಹೊಂದಿದೆ ನೂತನವಾಗಿ ಆಯ್ಕೆಯಾಗಿರುವ ನೀವೆಲ್ಲರೂ ಉತ್ತಮವಾದ ಸಲಹೆಗಳನ್ನು ನೀಡಿ ಆಸ್ಪತ್ರೆಯ ಅಭಿವೃದ್ಧಿಯ ಕಡೆ ಹೆಚ್ಚು ಗಮನಹರಿಸಿದಾಗ ನಾವೆಲ್ಲಾ ವೈದ್ಯರು ಹಾಗು ಸಿಬ್ಬಂದಿಗಳು ಉತ್ತಮ ಸೇವೆ ಸಲ್ಲಿಸಲು ಸಹಾಯ ವಾಗುತ್ತದೆ.
      ಪ್ರಸ್ತುತ ಮುಖ್ಯವಾಗಿ ಆಸ್ಪತ್ರೆಗೆ ಸುಸಜ್ಜಿತವಾದ ಕಾಂಪೌಂಡ್ ಒಂದು ಬೇಕಾಗಿರುತ್ತದೆ ಜೊತೆಗೆ ಮುಂಬಾಗದಲ್ಲಿನ ಉದ್ಯಾನವನ ವನ್ನು ಸಹ ಅಭಿವೃದ್ಧಿಪಡಿಸಬೇಕಾಗಿದೆ ಇದೆಲ್ಲಕ್ಕೂ ನೂತನ ಸಲಹಾ ಸಮಿತಿ ಸದಸ್ಯರು ಸಹಕರಿಸಿ ಸರ್ಕಾರದ ಮಟ್ಟದಲ್ಲಿ ಜನಪ್ರತಿನಿಧಿಗಳ ಸಹಯೋಗದೊಂದಿಗೆ ಹೆಚ್ಚಿನ ಅನುದಾನ ತರುವ ಪ್ರಯತ್ನ ಮಾಡುವoತೆ ಆಗ್ರಹ ಪಡಿಸಿದರು.
     ಮಹಿಳಾ ಸದಸ್ಯೆ ಪಿ.ಬಿ.ಲಲಿತಮ್ಮ ಮಾತನಾಡಿ ಸಾಮಾನ್ಯವಾಗಿ ಮಹಿಳೆಯರು ಬಹಿರಂಗವಾಗಿ ಹೇಳಲಾಗದಂತಹ ಹಲವಾರು ಕಾಯಿಲೆಗಳಿಂದ ಬಳಲುತ್ತಿರುತ್ತಾರೆ ಅಂತಹವರ ಚಿಕಿತ್ಸೆ ಮಾಡಿಸುವಲ್ಲಿ ಮತ್ತು ಮಹಿಳೆಯರ ಹೆರಿಗೆ ಇತ್ಯಾದಿ ಚಿಕಿತ್ಸೆಗಳ ಬಗ್ಗೆ ಕಾಳಜಿ ವಹಿಸಿ ಅವರೆಲ್ಲರನ್ನು ಗುಣಪಡಿಸುವ ಕೆಲಸ ಮಾಡುತ್ತೇನೆ ಹಾಗೂ ಹೆಚ್ಚು ಹೆಚ್ಚು ಮಹಿಳೆಯರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಹೆರಿಗೆ ಮುಂತಾದವುಗಳನ್ನು ಮಾಡಿಸಿಕೊಳ್ಳಲು ಸಲಹೆಗಳನ್ನು ನೀಡುತ್ತೇನೆ ಎಂದು ಹೇಳಿದರು.
      ಈ ಸಮಯದಲ್ಲಿ ನೂತನ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರುಗಳಾದ ವಿ.ವಿಜಯಕುಮಾರ್, ಅಬ್ದುಲ್ ಖುದ್ದೂಷ್, ಹಬೀಬ್ ರಹಿಮಾನ್, ಎಸ್.ಭರತ್, ವಿ.ಶ್ರೀನಿಧಿ, ಪ್ರಕಾಶ್, ಕಾಂಗ್ರೆಸ್ ಮುಖಂಡರುಗಳಾದ ಸಂತೋಷ್ ನೋಟದ, ತಿಪ್ಪೇಶ್, ಪ್ರವೀಣ್ ಸೇರಿದಂತೆ ಆಸ್ಪತ್ರೆಯ ಹಲವು ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *